ಸೇತುವೆ ಕುಸಿತ: ಕೊನೆಗೂ ಒಂದು ವಾರದ ನಂತರ ಕಾಳಿ ನದಿಯಿಂದ ಲಾರಿ ಹೊರತೆಗೆದ ಜಿಲ್ಲಾಡಳಿತ ಆಗಸ್ಟ್ 7ರಂದು ಗೋವಾದಿಂದ ತಮಿಳುನಾಡಿಗೆ ತೆರಳುತ್ತಿದ್ದ ಲಾರಿ ಸೇತುವೆ ಕುಸಿದು ನದಿಗೆ ಬಿದ್ದಿತ್ತು. ಆಗಸ್ಟ್ 14 ರಂದು ಟ್ರಕ್ ಅನ್ನು ನದಿಯಿಂದ ಹೊರ ತೆಗೆಯುವ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕಾರವಾರ: ಕಾರವಾರದ ಹೊರವಲಯದಲ್ಲಿ 42 ವರ್ಷಗಳಷ್ಟು ಹಳೆಯದಾದ ಸೇತುವೆ ಕುಸಿದು ಬಿದ್ದು ಕಾಳಿ ನದಿಗೆ ಬಿದ್ದಿದ್ದ ಟ್ರಕ್ ಅನ್ನು ಒಂದು ವಾರದ ನಂತರ ಗುರುವಾರ ಉತ್ತರ ಕನ್ನಡ ಜಿಲ್ಲಾಡಳಿತ ಕೊನೆಗೂ ಹೊರತೆಗೆದಿದೆ.ಆಗಸ್ಟ್ 7ರಂದು ಗೋವಾದಿಂದ ತಮಿಳುನಾಡಿಗೆ ತೆರಳುತ್ತಿದ್ದ ಲಾರಿ ಸೇತುವೆ ಕುಸಿದು ನದಿಗೆ ಬಿದ್ದಿತ್ತು. ಆಗಸ್ಟ್ 14 ರಂದು ಟ್ರಕ್ ಅನ್ನು ನದಿಯಿಂದ ಹೊರ ತೆಗೆಯುವ ಕಾರ್ಯಾಚರಣೆ ಆರಂಭಿಸಲಾಗಿತ್ತು. ಎರಡು ದಿನಗಳ ಕಾರ್ಯಾಚರಣೆ ಬಳಿಕ ಕೊನೆಗೂ ಗುರುವಾರ ಸಂಜೆ ಕ್ರೇನ್ ಮೂಲಕ ಲಾರಿಯನ್ನು ಹೊರ ತರಲಾಗಿದೆ.ಯಲ್ಲಾಪುರ ಮೂಲದ ಕಂಪನಿಗೆ ಸೇರಿದ ಕ್ರೇನ್ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಸ್ಥಳೀಯ ಸಿದ್ದಿ ಯುವಕ ಸಣ್ಯಾ ಮತ್ತು ಈಶ್ವರ ಮಲ್ಪೆ ಮತ್ತು ತಂಡ ಲಾರಿಗೆ ಹಗ್ಗ ಕಟ್ಟಲು ನೀರಿಗೆ ಧುಮುಕಿದ್ದರು. ಡೈವರ್‌ಗಳು ಮತ್ತು ಎನ್‌ಡಿಆರ್‌ಎಫ್, ಜಿಲ್ಲಾಡಳಿತ ಮತ್ತು ಪೊಲೀಸರು ಒಂಬತ್ತು ಗಂಟೆಗಳ ಕಾರ್ಯಾಚರಣೆಯ ನಂತರ ಟ್ರಕ್ ಅನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು.ಐದು ಗಂಟೆಗಳ ಹೋರಾಟದ ನಂತರ ಟ್ರಕ್ ಅನ್ನು ನೂರು ಮೀಟರ್ ಮೇಲಕ್ಕೆ ಎಳೆಯಲಾಯಿತು. ಲಾರಿಗೆ ಕಟ್ಟಿದ್ದ ಹಗ್ಗ ಹಲವು ಬಾರಿ ತುಂಡಾಗಿದ್ದು, ಕಂಪನಿಯು ಈಶ್ವರ ಮಲ್ಪೆ ಮತ್ತು ಸಣ್ಯಾ ಸಿದ್ದಿ ಅವರನ್ನು ಪದೇ ಪದೇ ಅವಲಂಬಿಸಬೇಕಾಯಿತು. ಕ್ರೇನ್ ಅನ್ನು ಬಾಡಿಗೆಗೆ ಪಡೆದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಸಣ್ಯಾ ಸಿದ್ದಿ, ವಾಹನಕ್ಕೆ ಹಗ್ಗವನ್ನು ಕಟ್ಟಲು ಹಲವಾರು ನಿಮಿಷಗಳ ಕಾಲ ಆಮ್ಲಜನಕವಿಲ್ಲದೆ ನೀರಿನಲ್ಲಿಯೇ ಇದ್ದರು.ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಸೇರಿದ ಟ್ರಕ್ ಅನ್ನು ಈಗ ಮೂರು ಟೋಯಿಂಗ್ ವಾಹನಗಳು, ಕ್ರೇನ್ ಮತ್ತು ಹಲವಾರು ಹಗ್ಗಗಳ ಸಹಾಯದಿಂದ ನೀರಿನಿಂದ ಹೊರತೆಗೆಯಲಾಗಿದೆ.ಸಣ್ಯಾ ಸಿದ್ದಿ ಅವರ ಕಾರ್ಯವನ್ನು ಅಧಿಕಾರಿಗಳು ಶ್ಲಾಘಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು, ಉತ್ತರ ಕನ್ನಡ ಎಸ್ಪಿ ನಾರಾಯಣ್ ಮತ್ತು ಉತ್ತರ ಕನ್ನಡ ಡಿಸಿ ಲಕ್ಷ್ಮಿ ಪ್ರಿಯಾ ಅವರು ಸ್ಥಳದಲ್ಲಿ ಉಪಸ್ಥಿತರಿದ್ದರು.